ಒಮ್ಮೆ ಜಯಂತ ಹಾಗೂ ವಿವೇಕ ಎನ್ನುವ ಇಬ್ಬರು ಸ್ನೇಹಿತರು ಬಿರುಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಯಾವುದೋ ವಿಷಯದಲ್ಲಿ ಅವರಿಬ್ಬರಿಗೂ ಮನಸ್ತಾಪವಾಗಿ, ಮಾತಿಗೆ ಮಾತು ಬೆಳೆದು ಜಯಂತ ವಿವೇಕನ ಕೆನ್ನೆಗೆ ಹೊಡೆದು ಬಿಟ್ಟನು.
ಆಗ ಏಟು ತಿಂದ ವಿವೇಕ ತಿರುಗಿ ಹೊಡೆಯದೆ ನೆಲದತ್ತ ಬಾಗಿ, ತನ್ನ ಬೆರಳುಗಳಿಂದ ಮರಳಿನ ಮೇಲೆ 'ನಾನಿವತ್ತು ನನ್ನ ಸ್ನೇಹಿತನ ಕೈಯಿಂದ ಪೆಟ್ಟು ತಿಂದೆ' ಎಂದು ಬರೆದನು. ಹಾಗೆ ಅವರು ಮೌನವಾಗಿ ಮುಂದೆ ಸಾಗಿ ಒಂದು ಕೆರೆಯ ಸಮೀಪ ತಲುಪಿದರು. ನೀರು ಕುಡಿಯಲೆಂದು ವಿವೇಕ ಕೆರೆಯಲ್ಲಿ ಇಳಿಯುತ್ತಿರುವಾಗ ಜವುಗಿನಲ್ಲಿ ಹೂತು ಹೋಗತೊಡಗಿದನು. ಆಗ ಥಟ್ಟನೆ ಜಯಂತ ಅವನನ್ನು ಮೇಲಕ್ಕೆಳೆದುಕೊಂಡನು. ಆಗ ವಿವೇಕ ಅಲ್ಲೇ ಹತ್ತಿರದಲ್ಲಿರುವ ಬಂಡೆಯ ಮೇಲೆ 'ಇವತ್ತು ನನ್ನ ಆತ್ಮೀಯ ಸ್ನೇಹಿತ ಜಯಂತ ನನ್ನ ಪ್ರಾಣ ಉಳಿಸಿದ' ಎಂದು ಕೆತ್ತಿದನು. ಅದನ್ನು ಕಂಡು ಜಯಂತನಿಗೆ ಆಶ್ಚರ್ಯವಾಯಿತು." ನಾನು ಕೋಪದಲ್ಲಿ ನಿನಗೆ ಹೊಡೆದ ಸಂಗತಿಯನ್ನು ಮರಳಿನ ಮೇಲೆ ಬರೆದೆ . ಈಗ ನಿನ್ನನ್ನು ರಕ್ಷಿಸಿದ ಸಂಗತಿಯನ್ನು ಕಲ್ಲಿನ ಮೇಲೆ ಕೆತ್ತುತ್ತಿದ್ದಿಯಲ್ಲಾ..! ಏಕೆ.."? ಎಂದು ಕೇಳಿದ. ಆಗ ಸುಮಂತ ನಗುತ್ತಾ," ಮರಳಲ್ಲಿ ಬರೆದದ್ದು ಬೇಸರದ ಸಂಗತಿ. ಬೇಗ ಅಳಿಸಿಹೋಗಲಿ ಎನ್ನುವ ಕಾರಣಕ್ಕೆ. ಬಂಡೆಯ ಮೇಲೆ ಬರೆದಿದ್ದು ಶಾಶ್ವತವಾಗಿರಲಿ ಎಂದು.." ಹೇಳುತ್ತಾ ಗೆಳೆಯನನ್ನು ತಬ್ಬಿಕೊಂಡು ಮುನ್ನೆಡೆದ. ಎಂತಹ ಮೌಲಿಕವಾದ ಮಾತುಗಳಿವು.!ನೋವಿನ ಗಳಿಗೆಗಳನ್ನು ಪ್ರತಿದಿನ ನೆನಪಿಸಿಕೊಳ್ಳುವುದು ದ್ವೇಷಕ್ಕೆ ಕಾರಣವಾಗಿ ಆ ದ್ವೇಷದ ಬೆಂಕಿ ನಮ್ಮನ್ನೇ ಸುಡುತ್ತದೆ. ಆದ್ದರಿಂದ ಯಾರಿಂದಾದರೂ ನಮಗೆ ನೋವಾದರೆ ಆ ದುಃಖವನ್ನು ಉಸುಕಿನ ಮೇಲಿನ ಬರಹದಂತೆ ಹಗುರವಾಗಿ ತೆಗೆದುಕೊಳ್ಳಬೇಕು. ನಮ್ಮೊಳಗಿರುವ ಕ್ಷಮೆಯೆಂಬ ಗಾಳಿ ಬೀಸಲು ಆ ನೋವು ಅಳಿಸಿಹೋಗುತ್ತದೆ. ಅಂತೆಯೇ ಬೇರೆಯವರಿಂದ ನಮಗಾದ ಉಪಕಾರಕ್ಕೆ ಮನದಲ್ಲಿ ಸದಾ ಗಟ್ಟಿ ನೆಲೆಯನ್ನು ನೀಡಬೇಕು. ಕಲ್ಲಿನಲ್ಲಿ ಕೆತ್ತಿದ ಬರೆಹ ಹೇಗೆ ಶಾಶ್ವತವೋ ಹಾಗೆ ಕಷ್ಟಕಾಲದಲ್ಲಿ ನಮಗೆ ಸಹಾಯ ಮಾಡಿದವರನ್ನು ಸದಾ ಸ್ಮರಿಸಬೇಕು. ನೋವುಗಳ ಅಳಿಸಿ ನಲಿವುಗಳ ಉಳಿಸಿಕೊಂಡಾಗ ಮಾತ್ರ ಬದುಕು ಸಹ್ಯ ಹಾಗೂ ಚೆನ್ನ ಅಲ್ಲವೇ...
ರೇಖಾ ಭಟ್
ಶಿಕ್ಷಕಿ
ಸ ಹಿ ಪ್ರಾ ಶಾಲೆ ಕಾನಗೋಡ
ಯಲ್ಲಾಪುರ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ